ಜಿ. ಎಸ್. ಶಿವರುದ್ರಪ್ಪ
From Wikipedia
'ದಾರಿ ನೂರಾರಿವೆ ಬೆಳಕಿನರಮನೆಗೆ'! 'ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ'! 'ಒಂದೊಂದು ಹಂತ,ನೂರಾರು ಭಾವದ ಭಾವಿ ಎತ್ತಿಕೋ!ನಿನಗೆ ಬೇಕಾದಷ್ಟು ಸಿಹಿನೀರ,ಪಾತ್ರೆಯಾಕಾರಗಳ ಕುರಿತ ಏತಕೆ ಜಗಳ?ನಮಗೆ ಬೇಕಾದದ್ದು ದಾಹ ಪರಿಹಾರ'-ಯಾರು ಈ ಮೋಡಿ ಮಾಡುವ ಮಾತಿನ ಗಾರುಡಿಗ ಎಂಬ ಅಚ್ಚರಿ ಬೇಡ. ಇವರೇ ಕನ್ನಡದ ಇಂದಿನ ರಾಷ್ಟ್ರಕವಿ ಡಾ|| ಜಿ.ಎಸ್.ಶಿವರುದ್ರಪ್ಪ.ಕವಿ,ವಿಮರ್ಶಕ,ಸಂಶೋಧಕ,ನಾಟಕಕಾರ,ಉತ್ತಮ ಶಿಕ್ಷಕ ಹಾಗೂ ಒಳ್ಳೆಯ ಆಡಳಿತಗಾರ.
ಜಿ.ಎಸ್.ಶಿವರುದ್ರಪ್ಪನವರು(ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ) ಶಿವಮೊಗ್ಗಾ ಜಿಲ್ಲೆಯ ಶಿಕಾರಿಪುರದ ಹತ್ತಿರವಿರುವ ಈಸೂರುಗ್ರಾಮದಲ್ಲಿ ೧೯೨೬ ಫೆಬ್ರುವರಿ ೭ ರಂದು ಜನಿಸಿದರು. ತಂದೆ ಶಾಂತವೀರಪ್ಪ ಅಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು.ತಾಯಿ ವೀರಮ್ಮ.ತಂದೆಯಿಂದ ಸಾಹಿತ್ಯದ ಗೀಳು ಹತ್ತಿಸಿಕೊಂಡ ಶಿವರುದ್ರಪ್ಪನವರು ಹೊನ್ನಾಳಿ,ಕೋಟೆಹಾಳಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು,ರಾಮಗಿರಿ,ಬೆಲಗೂರುಗಳಲ್ಲಿ ಮಾಧ್ಯಮಿಕ ಶಿಕ್ಷಣವನ್ನು,ದಾವಣಗೆರೆ,ತುಮಕೂರುಗಳಲ್ಲಿ ಪ್ರೌಢಶಾಲಾ,ಇಂಟರ್ ಮೀಡಿಯಟ್ ಶಿಕ್ಷಣವನ್ನೂ ಮುಗಿಸಿದರು.ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.ಎ.ಆನರ್ಸ್ ಪದವಿ ಪಡೆದರು.ಕೆಲಕಾಲ ದಾವಣಗೆರೆಯ ಡಿ.ಆರ್.ಎಮ್.ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದು ನಂತರ ಎಮ್.ಎ.ಮುಗಿಸಿದರು.೧೯೫೫ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯವೇತನದ ಸಹಾಯದಿಂದ ಕುವೆಂಪುರವರ ನೇತೃತ್ವದಲ್ಲಿ ಸಂಶೋಧನೆ ನಡೆಸಿದರು.ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ದೊರಕಿಸಿಕೊಟ್ಟ ಇವರ ಪ್ರೌಢ ಪ್ರಬಂಧ-ಸೌಂದರ್ಯ ಸಮೀಕ್ಷೆ.
ಡಾ| ಜಿ.ಎಸ್.ಶಿವರುದ್ರಪ್ಪನವರು ಮೈಸೂರು ಮಹಾರಾಜಾ ಕಾಲೇಜಿನಲ್ಲಿ,ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಹಾಗು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.೧೯೬೩ರ ನವೆಂಬರ್ನಿಂದ ೨ ವರ್ಷಗಳ ಕಾಲ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಉಪಪ್ರಾಧ್ಯಾಪಕ,ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.೧೯೭೧ರ ನವೆಂಬರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾದ ಅವರು,ಮುಂದೆ "ಕನ್ನಡ ಅಧ್ಯಯನ ಕೇಂದ್ರ"ವಾಗಿ ಪರಿವರ್ತಿತವಾದಾಗ,ಅದರ ನಿರ್ದೇಶಕರೂ ಆದರು.ಹಸ್ತಪ್ರತಿಗಳ ಸಂಗ್ರಹಣೆ,ರಕ್ಷಣೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಶಿವರುದ್ರಪ್ಪನವರು ೧೯೭೧ರಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ 'ಹಸ್ತಪ್ರತಿ ವಿಭಾಗ'ವನ್ನು ಪ್ರಾರಂಭಿಸಿದರು.ಕೇವಲ ೪ ವರ್ಷಗಳಲ್ಲಿ ೩೦೦೦ಕ್ಕೂ ಹೆಚ್ಚು ಓಲೆಗರಿಯ ಹಾಗೂ ೧೦೦೦ಕ್ಕೂ ಹೆಚ್ಚು ಕಾಗದದ ಹಸ್ತಪ್ರತಿಗಳ ಸಂಗ್ರಹಣೆಯಾಯಿತು.
ಪರಿವಿಡಿ |
[ಬದಲಾಯಿಸಿ] ಸಾಹಿತ್ಯ
[ಬದಲಾಯಿಸಿ] ಕಾವ್ಯಸಂಕಲನ
- ಸಾಮಗಾನ
- ಕಾರ್ತೀಕ
- ದೀಪದ ಹೆಜ್ಜೆ
- ಪ್ರೀತಿ ಇಲ್ಲದ ಮೇಲೆ
- ದೇವಶಿಲ್ಪ
- ಗೋಡೆ
- ಅನಾವರಣ
- ತೆರೆದ ದಾರಿ
- ಕಾಡಿನ ಕತ್ತಲಲ್ಲಿ
[ಬದಲಾಯಿಸಿ] ಜೀವನಚರಿತ್ರೆ
- ಕರ್ಮಯೋಗಿ( ಸಿದ್ದರಾಮನ ಜೀವನ ಚರಿತ್ರೆ)
[ಬದಲಾಯಿಸಿ] ಪ್ರವಾಸಕಥನ
- ಮಾಸ್ಕೋದಲ್ಲಿ ಇಪ್ಪತ್ತೆರಡು ದಿನ
[ಬದಲಾಯಿಸಿ] ವಿಮರ್ಶೆ
- ವಿಮರ್ಶೆಯ ಪೂರ್ವಪಶ್ಚಿಮ
- ಗತಿಬಿಂಬ
- ಪರಿಶೀಲನ
- ಪ್ರತಿಕ್ರಿಯೆ
- ಕನ್ನಡ ಸಾಹಿತ್ಯ ಸಮೀಕ್ಷೆ
- ನವೋದಯ
- ಕಾವ್ಯಾರ್ಥಚಿಂತನ
- ಬೆಡಗು
[ಬದಲಾಯಿಸಿ] ಗೌರವ
ಜಿ.ಎಸ್.ಶಿವರುದ್ರಪ್ಪನವರಿಗೆ ವಿಮರ್ಶೆಗಾಗಿ ೧೯೮೪ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತು.ಇದಲ್ಲದೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸೋವಿಯತ್ ಲ್ಯಾಂಡ ನೆಹರೂ ಪ್ರಶಸ್ತಿ ಸಹ ಶಿವರುದ್ರಪ್ಪನವರಿಗೆ ದೊರೆತಿವೆ.೨೦೦೬ನೆಯ ಸಾಲಿನಲ್ಲಿ ಜರಗುತ್ತಿರುವ ಸುವರ್ಣ ಕರ್ನಾಟಕ ಉತ್ಸವದ ಸಂದರ್ಭದಲ್ಲಿ ಜಿ.ಎಸ್.ಶಿವರುದ್ರಪ್ಪನವರಿಗೆ ಕರ್ನಾಟಕ ಸರಕಾರವು ರಾಷ್ಟ್ರಕವಿ ಎನ್ನುವ ಗೌರವವನ್ನು ಪ್ರದಾನಿಸಿದೆ.
ಜಿ.ಎಸ್.ಶಿವರುದ್ರಪ್ಪನವರು ೧೯೯೨ ರಲ್ಲಿ ದಾವಣಗೆರೆಯಲ್ಲಿ ಜರುಗಿದ ೬೧ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.