ಗೋವಿಂದ ಪೈ

From Wikipedia

ಗೋವಿಂದ ಪೈ - ರಾಷ್ಟ್ರಕವಿ ಎಂದು ಹೆಸರಾದ ಕನ್ನಡದ ಸಾಹಿತಿಗಳಲ್ಲೊಬ್ಬರು.

ರಾಷ್ಟ್ರಕವಿ ಗೋವಿಂದ ಪೈಯವರು ಮಂಗಳೂರಿನಲ್ಲಿ ೧೮೮೩ ಮಾರ್ಚ್ ೨೩ರಂದು ಜನಿಸಿದರು. ಇವರ ಆರಂಭದ ವ್ಯಾಸಂಗ ಮಂಗಳೂರಿನಲ್ಲಿ ನಡೆಯಿತು. ಹೆಚ್ಚಿನ ವ್ಯಾಸಂಗಕ್ಕಾಗಿ ಮದರಾಸಿಗೆ ( ಈಗಿನ ಚೆನ್ನೈಗೆ) ತೆರಳಿದರು. ಅದರೆ ತಂದೆಯ ಮರಣದಿಂದಾಗಿ ಪದವಿ ಪಡೆಯದೆ ಮರಳಬೇಕಾಯಿತು.

ಗೋವಿಂದ ಪೈಯವರು ನಂತರ ಕೇರಳ ರಾಜ್ಯದಲ್ಲಿ ಸೇರ್ಪಡೆಯಾದ ಮಂಜೇಶ್ವರದಲ್ಲಿ ನೆಲಸಿದ್ದರಿಂದ ಮಂಜೇಶ್ವರ ಗೋವಿಂದ ಪೈ ಎಂದೇ ಹೆಸರಾದರು. ಗೋವಿಂದ ಪೈಗಳು ಗಿಳಿವಿಂಡು, ನಂದಾದೀಪ ಎಂಬ ಕಾವ್ಯ ಸಂಕಲನಗಳನ್ನು ಹೊರ ತಂದಿದ್ದಾರೆ.‘ ವೈಶಾಖಿ’ ಹಾಗು ‘ ಗೊಲ್ಗೊಥಾ’ ಎನ್ನುವ ಎರಡು ಖಂಡಕಾವ್ಯಗಳನ್ನು ಬರೆದಿದ್ದಾರೆ ‘ ಹೆಬ್ಬೆರೆಳು’ ಎನ್ನುವ ಪದ್ಯಗಳನ್ನು ಒಳಗೊಂಡ ಏಕಾಂಕ ನಾಟಕವನ್ನೂ, ‘ ಚಿತ್ರಭಾನು’ ಎನ್ನುವ ಗದ್ಯನಾಟಕವನ್ನೂ ಬರೆದಿದ್ದಾರೆ.'ತಾಯಿ ‘ ಎನ್ನುವ ಸಾಮಾಜಿಕ ನಾಟಕವನ್ನು ಬರೆದದ್ದಲ್ಲದೆ, ಜಪಾನಿನ ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಆದರೆ ಸಂಶೋಧನೆ ಗೋವಿಂದ ಪೈಗಳ ಬರೆವಣಿಗೆಯ ಅತಿ ಮುಖ್ಯ ಭಾಗ. ತುಳುನಾಡಿನ ಇತಿಹಾಸ, ಗೌಡ ಸಾರಸ್ವತರ ಮೂಲ, ಬಸವೇಶ್ವರ ವಂಶಾವಳಿ, ಹಾಗು ಕರ್ನಾಟಕದ ಪ್ರಾಚೀನ ರಾಜಮನೆತನಗಳು, ಭಾರತೀಯ ಇತಿಹಾಸ, ಜೈನ, ಬೌದ್ಧ ಹಾಗು ವೀರಶೈವ ಧರ್ಮಗಳ ಬಗೆಗೆ ಮೌಲಿಕ ಸಂಶೋಧನೆ ಮಾಡಿ, ಅನೇಕ ಲೇಖನಗಳನ್ನು ಬರೆದಿದ್ದಾರೆ. ಗೋವಿಂದ ಪೈಗಳ ಪತ್ರಗಳನ್ನು ಜಿ.ಪಿ.ರಾಜರತ್ನಂರವರು ‘ ಮಂಜೇಶ್ವರ ಗೋವಿಂದ ಪೈಗಳ ಪತ್ರಗಳು’ ಎನ್ನುವ ಪುಸ್ತಕರೂಪದಲ್ಲಿ ಹೊರತಂದಿದ್ದಾರೆ.

ಗೋವಿಂದ ಪೈಗಳು ಕೊಂಕಣಿ, ತುಳು, ಕನ್ನಡ, ಸಂಸ್ಕೃತ, ಮಲಯಾಳಂ, ತೆಲುಗು, ತಮಿಳು, ಮರಾಠಿ, ಒರಿಯಾ, ಬಂಗಾಳಿ, ಪಾಲಿ, ಅರ್ಧಮಾಗಧಿ, ಉರ್ದು, ಪರ್ಷಿಯನ್, ಗ್ರೀಕ್, ಲ್ಯಾಟಿನ್ ಹಾಗು ಜಪಾನಿ ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದಿದ್ದರು. ೧೯೪೯ರಲ್ಲಿ ಮದರಾಸು ಸರಕಾರವು (೧೯೫೬ರಲ್ಲಿ ಕರ್ನಾಟಕ ಏಕೀಕರಣಕ್ಕಿಂತ ಮೊದಲು ದಕ್ಷಿಣ ಕನ್ನಡ ಜಿಲ್ಲೆಯು ಆಗಿನ ಮದರಾಸು ರಾಜ್ಯದಲ್ಲಿ ಅಂದರೆ ಈಗಿನ ತಮಿಳುನಾಡಿನಲ್ಲಿ ಇತ್ತು) ಗೋವಿಂದ ಪೈಗಳಿಗೆ ರಾಷ್ಟ್ರಕವಿ ಎಂದು ಸನ್ಮಾನ ನೀಡಿ ಗೌರವಿಸಿತು.

೧೯೫೦ರಲ್ಲಿ ಮುಂಬಯಿಯಲ್ಲಿ ಜರುಗಿದ ೩೪ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೋವಿಂದ ಪೈಗಳು ಅಧ್ಯಕ್ಷರಾಗಿದ್ದರು.

ಉಡುಪಿಯಲ್ಲಿ ಗೋವಿಂದ ಪೈ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ.

೧೯೬೩ಸೆಪ್ಟೆಂಬರ್ ೦೬ ರಂದು ಗೋವಿಂದ ಪೈಯವರು ನಿಧನ ಹೊಂದಿದರು.