ಚಿದಂಬರ ಸ್ವಾಮಿಗಳು

From Wikipedia

ಶ್ರೀ ಚಿದಂಬರ ಸ್ವಾಮಿಗಳು, ಗುಬ್ಬಿ : [೦೫-೦೨-೧೮೯೭]

ಇವರು ಚಿದಂಬರ ಮತ್ತು ಗೋದಾವರಿ ಶಿಷ್ಯ ಪರಂಪರೆಗೆ, ಸೇರಿದವರು. ಈ ಶಿಷ್ಯ ಸಂಪತ್ತು ಇಡೀ ಭಾರತ ದೇಶದಲ್ಲಿ ಪ್ರಸಾರದಲ್ಲಿದೆ. 'ಭಕ್ತಿಯೋಗ'ವೇ ಇದರ ಮೂಲ ಸಂಪತ್ತು. ಚಿದಂಬರರು ತಮ್ಮ ಪೂರ್ವಾಶ್ರಮದಲ್ಲಿ 'ಪೋಸ್ಟ್ ಮಾಸ್ಟರ್' ಕೆಲಸದಲ್ಲಿದ್ದರು. ಅವರು ತುಮಕೂರು ಜಿಲ್ಲೆ ಸೆಟ್ಟಿಹಳ್ಳಿಯಲ್ಲಿ ವಾಸವಾಗಿದ್ದ, ತಿಮ್ಮಪ್ಪ ನವರ ಪುತ್ರರು. ಹಳ್ಳಿ ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರು.ಚಿಕ್ಕವಯಸ್ಸಿನಲ್ಲೇ ಮದುವೆಯಾಗಿದ್ದ ಅವರ ಹೆಂಡತಿ ಮರಣಹೊಂದಿದರು. ಬಡತನ. ೪೦ ವರ್ಷಗಳ ನಂತರ ಗೌರಮ್ಮ ನವರ ಜೊತೆ ಮದುವೆಯಾಯಿತು. ನರಸಿಂಹಪುರಕ್ಕೆ ವರ್ಗವಾಗಿ ಬಡ್ತಿಯೂ ಸಿಕ್ಕಿತು. ಅವರಿಗೆ ವೆಂಕಟ್ರಾಮಯ್ಯ ನೆಂಬ ಮಗ, ದುರ್ಮುಖನಾಮ ಸಂವತ್ಸರದ ಮಾಘ ಶುದ್ಧ ಚತುರ್ಥಿ, ೦೫-೦೨-೧೮೯೭ ರಲ್ಲಿ ಜನಿಸಿದನು. ತಿಮ್ಮಪ್ಪ ನವರು ಒಳ್ಳೆಯ ಜ್ಯೋತಿಷಿಗಳೂ ಆಗಿದ್ದರು. ಆಗ ಆ ಊರಿಗೆ ಹೊಸದಾಗಿ ಬಂದ ಮುನ್ಸಿಫರಾದ ಬಿ. ವೆಂಕಟಾಚಾರ್ ಎಂಬ ಲೇಖಕರ, ಅನುವಾದಕರ ಪರಿಚಯವಾಯಿತು. ಆಗಿನ ಕಾಲದ ಬೆಂಗಾಲಿ ಜನಪ್ರಿಯ ಕಾದಂಬರಿಗಳಾದ, ದೇವಿ ಚೌಧುರಾನಿ, ಆನಂದಮಠ್, ವಿಷವೃಕ್ಷ, ಗಳಂತಹ ಸುಪ್ರಸಿದ್ಧ ಕಾದಂಬರಿಗಳನ್ನು ಕನ್ನಡದಲ್ಲಿ ತರ್ಜುಮೆಮಾಡಿ ಅವುಗಳನ್ನು ಪ್ರಕಟಿಸಿದರು. ಇವರ ಪರಿಚಯ ತಿಮ್ಮಪ್ಪನವರ ಪರಿವಾರಕ್ಕಾದದ್ದು ಒಂದು ಸುಯೋಗವೇ ಸರಿ. ವೆಂಕಟರಮಣ ಓದಿನಲ್ಲಿ ಆಸಕ್ತಿ ತೊರಿಸಲಾರಂಭಿಸಿದ. ೧೯೦೬ ರಲ್ಲಿ ಎಲ್.ಎಸ್.ಪಾಸಾಯಿತು. ಮುಂದೆ ಲಿಂಗಮ್ಮ ಎಂಬ ಸಾಧ್ವಿಯ ಜೊತೆ ಮದುವೆಯೂ ಆಯಿತು. ಆ ದಂಪತಿಗಳಿಗೆ ಒಂದು ಗಂಡು ಮಗುವಾಯಿತು. ಆದರೆ ಅವರ ಪತ್ನಿ ಉಳಿಯಲಿಲ್ಲ. ಇದರಿಂದ ವೆಂಕಟರಮಣರಿಗೆ ಜೀವನದಲ್ಲಿ ವಿರಕ್ತಿ ತಲೆದೋರಿತು. ಅದೇ ಸಮಯದಲ್ಲೇ ಆ ಊರಿಗೆ ಶ್ರೀ ನಾರಾಯಣ ಮಹಾರಾಜರೆಂಬ ಸನ್ಯಾಸಿಗಳು ಬಂದರು. ಅವರ ಒಡನಾಟದಿಂದ ವೆಂಕಟರಮಣನ ಜೀವನದಲ್ಲಿ ಅಧ್ಯಾತ್ಮದ ಬೀಜ ಅಂಕುರಿಸಿತು. ಅವನೇ ಮುಂದೆ 'ಚಿದಂಬರ' ನೆಂದು ಹೆಸರುವಾಸಿಯಾದನು. ಪೋಸ್ಟ್ ಆಫೀಸಿನಲ್ಲಿ ಅವರು ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡಿ ನಿವೃತ್ತರಾದರು. ಆ ಕೆಲಸದಿಂದ ನಿವೃತ್ತರಾದ ಬಳಿಕ, ಅಧ್ಯಾತ್ಮದಲ್ಲೇ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಒಮ್ಮೆ ಅವರಿಗೆ ಹಿಮಾಲಯದತ್ತ ಹೋಗಿ ಅಲ್ಲಿ ತಪಸ್ಸನ್ನಾಚರಿಸಿಕೊಂಡು ತಮ್ಮ ಜೀವನದ ಅಂತ್ಯವನ್ನು ಅಲ್ಲೇ ಕಳೆಯಬೇಕೆನ್ನುವ ಹಂಬಲವಿತ್ತಂತೆ. ಆದರೆ ಗುಬ್ಬಿಯ ಜನ ಅವರನ್ನು ಹೊರಗೆ ಹೋಗಲು ಬಿಡದೆ, ತಮ್ಮ ಊರಿನ ಜನರ ಮಾರ್ಗದರ್ಶನ ಮಾಡಿಕೊಂಡು ಅಲ್ಲಿಯೇ ಇರಲು ಒತ್ತಾಯಿಸಿದರು. ಆಗ ಅವರು ಊರಿನ ಹೊರಗೆ, 'ಚಿದಂಬರಾಶ್ರಮ'ವನ್ನು ಸ್ಥಾಪಿಸಿದರು. ಬೆಳೆಯುವ ಮಕ್ಕಳಲ್ಲಿ ಭಕ್ತಿ, ಶಿಸ್ತು, ಇವುಗಳನ್ನು ಎಳೆಯವಯಸ್ಸಿನಲ್ಲಿಯೇ ಧಾರೆಯೆರೆಯುವ ಹಂಬಲ ಅವರದು. ಒಂದು 'ಸಂಸ್ಕೃತ ಪಾಠಶಾಲೆ'ಯನ್ನು ಗುಬ್ಬಿಯಲ್ಲಿ ಸ್ಥಾಪಿಸಿದರು. 'ಗೀತೆ'ಯ ಮೇಲೆ ಒಂದು ಪುಸ್ತಕ, 'ಭಗವದ್ಗೀತೆಯ ಸಾರ', ಬರೆದರು. ನಿಷ್ಕಾಮ ಕರ್ಮಯೋಗ ಇನ್ನೊಂದು ಪುಸ್ತಕ. 'ಸೇವಾಸದನ' ವೆಂಬ ಅಧ್ಯಾತ್ಮಿಕ ಪತ್ರಿಕೆಯನ್ನು, ಬಹಳಕಾಲ ನಡೆಸಿಕೊಂಡು ಬಂದರು. ಅವರ ಆಶ್ರಮದಲ್ಲಿ ವಟುಗಳಿಗೆ 'ಬ್ರಹ್ಮೋಪದೇಶ'ವನ್ನೂ ಮಾಡಿಸುತ್ತಿದ್ದರು. ಆಶ್ರಮದಲ್ಲಿ ಭಜನೆ, ಕೀರ್ತನೆ, ಪೂಜೆಗಳು, ಹರಿಕಥೆ, ಪುರಾಣಶ್ರವಣಗಳು ನಿರಂತರವಾಗಿ ನಡೆದುಕೊಂಡು ಬರುತ್ತಿದ್ದವು.

ಚಿದಂಬರರು ಮಿತಭಾಷಿಗಳು. ಅವರ ಹೃದಯದಂತೆ, ಅವರ ನುಡಿಗಳೂ ಮಧುರ. ಎಲ್ಲ ವರ್ಗಗಳಿಗೂ ಹಿತವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅಲ್ಲಿನ ಎಲ್ಲಾ ನೆರೆಹೊರೆಯ ಪ್ರದೇಶದ ಭಕ್ತಜನರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಅನೇಕ ಬಾರಿ ಹತ್ತಿರದಲ್ಲೇ ಇದ್ದ, 'ಅನಾಥಸೇವಾಶ್ರಮ', ಮಲ್ಲಾಡಿಹಳ್ಳಿಗೆ ಹೋಗಿ, ರಾಘವೇಂದ್ರಸ್ವಾಮಿಗಳನ್ನು ಭೇಟಿಮಾಡಿಬರುತ್ತಿದ್ದರು. ರಾಘವೇಂದ್ರರು, ಈ ವಿಷಯವನ್ನು ತಮ್ಮ ಆತ್ಮ ಚರಿತ್ರೆ, "ಜೋಳಿಗೆಯ ಪವಾಡ," ದಲ್ಲಿ ದಾಖಲಿಸಿದ್ದಾರೆ.