ಆವರಣ
From Wikipedia
ಎಸ್. ಎಲ್. ಭೈರಪ್ಪನವರ ಕಾದಂಬರಿ.
'ಆವರಣ' ಖ್ಯಾತ ಸಾಹಿತಿ ಭೈರಪ್ಪನವರ ಇತ್ತೀಚಿನ ಕಾದಂಬರಿ. ಭೈರಪ್ಪನವರ ಮಿಕ್ಕ ಕಾದಂಬರಿಗಳನ್ನು ಪ್ರಕಟಿಸಿರುವ 'ಸಾಹಿತ್ಯ ಭಂಡಾರ' ಈ ಕಾದಂಬರಿಯನ್ನೂ ಹೊರ ತಂದಿದೆ. ಬೆಲೆ ಭಾರತದಲ್ಲಿ ೧೭೫ ರೂಪಾಯಿಗಳು, ಅಮೇರಿಕಾದಲ್ಲಿ ೧೩ ಡಾಲರ್. ಕಾದಂಬರಿಯ ವಸ್ತು ಇತಿಹಾಸ ಮತ್ತು ಇತಿಹಾಸದ ಹೆಸರಿನಲ್ಲಿ ಚಲಾವಣೆಗೆ ಬರುವ ಸುಳ್ಳುಗಳು. ಕಾದಂಬರಿಯ ಮುಖ್ಯ ಪಾತ್ರಗಳು ರಜಿಯಾ ಉರ್ಫ್ ಲಕ್ಷ್ಮೀ, ಆಕೆಯ ಗಂಡ ಅಮೀರ್ ಮತ್ತು ರಜಿಯಾಳ ಬೀಗರಾದ ಪ್ರೊಫೆಸರ್ ಶಾಸ್ತ್ರೀ.
ಪ್ರಕಟಗೊಳ್ಳುತ್ತಲೇ ಬಹಳ ಜನರ ಗಮನವನ್ನು ಸೆಳೆದ ಕಾದಂಬರಿ 'ಆವರಣ'. ಭೈರಪ್ಪನವರ ಜನಪ್ರಿಯತೆ ಇನ್ನೂ ಜೀವಂತ ಎನ್ನುವುದಕ್ಕೆ ಸಾಕ್ಷಿ ಈ ಕಾದಂಬರಿಯ ಪ್ರತಿಗಳ ಮಾರಾಟ ಮತ್ತು ಪತ್ರಿಕೆಗಳಲ್ಲಿ ಅದಕ್ಕೆ ಸಿಕ್ಕ ಪ್ರಾಮುಖ್ಯತೆ. ಕಾದಂಬರಿಯ ವಸ್ತು ಮತ್ತು ವಸ್ತು ನಿರ್ವಹಣೆ ಎರಡೂ ಅಸಾಮಾನ್ಯವಾದುದರಿಂದ ಸಹಜವಾಗಿಯೇ ಕಾದಂಬರಿಯ ಸುತ್ತ ವಿವಾದದ ಕೋಟೆ ನಿರ್ಮಿತವಾಗಿದೆ. ಸುಮತೀಂದ್ರ ನಾಡಿಗರು ಕಾದಂಬರಿಯನ್ನು ಮೆಚ್ಚಿ ಹೊಗಳಿ 'ವಿಜಯ ಕರ್ನಾಟಕ' ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ಬರೆದರೆ, ಕೆ. ಸತ್ಯನಾರಾಯಣ 'ಕನ್ನಡ ಪ್ರಭಾ' ಪತ್ರಿಕೆಯಲ್ಲಿ ಭೈರಪ್ಪನವರ ಕಾದಂಬರಿಯನ್ನು 'an act of bad faith' ಎಂದು ಕಟುವಾಗಿ ಟೀಕಿಸಿದ್ದಾರೆ. ಸರ್ಕಾರ ಕಾದಂಬರಿಯನ್ನು ನಿಷೇಧಿಸಬಹುದು ಎಂಬ ಮಾತು ಅಲ್ಲಲ್ಲಿ ಕೇಳಿ ಬಂದಿದೆ.