ನಾ.ಡಿಸೋಜಾ
From Wikipedia
ನಾರ್ಬರ್ಟ ಡಿ’ ಸೋಜಾ ರವರು ೧೯೩೭ ಜೂನ್ ೬ ರಂದು ಸಾಗರದಲ್ಲಿ ಜನಿಸಿದರು. ತಂದೆ ಎಫ್.ಪಿ.ಡಿ’ ಸೋಜಾ ಸಾಗರದ ಚಾಮರಾಜಪೇಟೆ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರಾಗಿದ್ದರು; ತಾಯಿ ರೂಪಿನಾ ಡಿ’ ಸೋಜಾ. ಸಾಗರದಲ್ಲಿ ಶಿಕ್ಷಣ ಪ್ರಾರಂಭಿಸಿದ ಡಿ’ ಸೋಜಾ ಶಿವಮೊಗ್ಗಾದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ ಮೀಡಿಯೆಟ್ ಮುಗಿಸಿದರು. ನಾ.ಡಿ' ಸೋಜಾರವರು ಈವರೆಗೆ ೩೭ ಕಾದಂಬರಿಗಳನ್ನು, ನಾಲ್ಕು ನಾಟಕಗಳನ್ನು, ಇಪ್ಪತ್ತೆಂಟು ಮಕ್ಕಳ ಕೃತಿಗಳನ್ನು, ನೂರಾರು ಕತೆಗಳನ್ನು ಬರೆದಿದ್ದಾರೆ.
ಇವರ ಕಾದಂಬರಿ “ ಕಾಡಿನ ಬೆಂಕಿ” ಹಾಗು “ದ್ವೀಪ” ಚಲನಚಿತ್ರಗಳಾಗಿ ರಜತಕಮಲ ಹಾಗು ಸ್ವರ್ಣಕಮಲ ಪ್ರಶಸ್ತಿಗಳನ್ನು ಪಡೆದಿವೆ. “ಬಳುವಳಿ” ಕಾದಂಬರಿ ಕೊಂಕಣಿಯಲ್ಲಿ ಚಲನಚಿತ್ರವಾಗಿದೆ. “ ಮುಳುಗಡೆ” ಕಾದಂಬರಿ ೧೯೯೭-೯೮ ರಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಹಾಗು “ ಕೊಳಗ” ಕಾದಂಬರಿ ೨೦೦೩-೨೦೦೫ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕಗಳಾಗಿವೆ. ೧೯೯೨ ರಲ್ಲಿ ‘ ಸಾರ್ಕ’ ದೇಶಗಳ ಸಾಹಿತಿಗಳ ಸಮ್ಮೇಳನದಲ್ಲಿ ಸ್ವಂತ ಕಥಾವಾಚನ ಮಾಡಿದ್ದರು.
ಪ್ರಶಸ್ತಿ ಹಾಗು ಪುರಸ್ಕಾರಗಳು:
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೮, ೧೯೯೩)
- ಗುಲ್ವಾಡಿ ವೆಂಕಟರಾವ ಪ್ರಶಸ್ತಿ ( ೧೯೮೮)
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೮)
- ಮಂಗಳೂರು ಸಂದೇಶ ಪ್ರಶಸ್ತಿ (೧೯೯೮)
- ನವದೆಹಲಿ ಕಳಾ ಪ್ರಶಸ್ತಿ (೧೯೯೮)
- ಪುತ್ತೂರು ನಿರಂಜನ ಸಾಹಿತ್ಯ ಪ್ರಶಸ್ತಿ (೨೦೦೩)
ಸದಸ್ಯತ್ವಗಳು:
- ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಸಿನೇಟ ಸದಸ್ಯ (೧೯೯೩-೯೫ ; ೧೯೯೬-೯೮)
- ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ (೧೯೯೫)
- ಪುಸ್ತಕ ಪ್ರಾಧಿಕಾರ ಸದಸ್ಯ (೧೯೯೫)
- ಕುವೆಂಪು ವಿಶ್ವವಿದ್ಯಾಲಯ ಸಿನೇಟ್ ಸದಸ್ಯ (೧೯೯೬-೯೮)
- ಶಿವಮೊಗ್ಗಾ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆಡಳಿತ ಪರಿಷತ್ ಸದಸ್ಯ (೧೯೯೬-೯೯)