ಶಂ.ಬಾ. ಜೋಷಿ
From Wikipedia
ಶಂ.ಬಾ. ಜೋಷಿ (ಜನವರಿ ೪, ೧೮೯೬ - ಸೆಪ್ಟೆಂಬರ್ ೨೮, ೧೯೯೧) ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುರ್ಲಹೊಸೂರು ಗ್ರಾಮದಲ್ಲಿ ೪-೧-೧೮೯೬ರಲ್ಲಿ ಜನಿಸಿದರು. ೧೯೧೪ರಲ್ಲಿ ಮಲಪ್ರಭಾ ನದಿಗೆ ಮಹಾಪೂರ ಬಂದಾಗ ಗುರ್ಲಹೊಸೂರು ಜಲಮಯವಾಯಿತು. ಜೊತೆಗೆ ತಂದೆಯ ಸಾವು. ಹೀಗಾಗಿ ಜೋಶಿಯವರು ಅಜ್ಜಿಯ ಮನೆಯಾದ ಪುಣೆಗೆ ಹೊದರು. ಅಲ್ಲಿ ಲೋಕಮಾನ್ಯ ತಿಲಕರ ಪ್ರಭಾವಕ್ಕೆ ಒಳಗಾದರು. ಅಲ್ಲಿಂದ ಧಾರವಾಡಕ್ಕೆ ಮರಳಿದ ಜೋಶಿಯವರು ೧೯೧೯ರಲ್ಲಿ ಕನ್ನಡ ಶಿಕ್ಷಕರ ತರಬೇತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ೧೯೨೦ರಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಶಿಕ್ಷಕರಾದರು. ೧೯೨೧ರಲ್ಲಿ ಜೋಶಿಯವರ ಮದುವೆ ಜಮಖಂಡಿಯ ಕರಂದೀಕರ ಮನೆತನದ ಸೌ. ಪಾರ್ವತಿಬಾಯಿಯವರೊಡನೆ ಜರುಗಿತು. ಚಿಕ್ಕೋಡಿಗೆ ಗಾಂಧೀಜಿ ಆಗಮಿಸಿದಾಗ ಶಂ.ಬಾ.ಜೋಶಿಯವರಿಂದ ಗಾಂಧೀಜಿಯ ಕೈಂಕರ್ಯ;ಇದರಿಂದಾಗಿ ಸರಕಾರದ ಅವಕೃಪೆ. ಜೋಶಿಯವರಿಗೆ ಉಗರಗೋಳಕ್ಕೆ ವರ್ಗಾವಣೆ. ಜೋಶಿಯವರು ಕೆಲಕಾಲದ ನಂತರ ರಾಜೀನಾಮೆ ನೀಡಿ ಧಾರವಾಡಕ್ಕೆ ಬಂದರು.
ಧಾರವಾಡದಲ್ಲಿ ೧೯೨೬-೨೭ರಲ್ಲಿ ಕರ್ನಾಟಕ ಹಾಯ್ ಸ್ಕೂಲಿನಲ್ಲಿ ಹಾಗು ೧೯೨೮ರಿಂದ ೧೯೪೬ರವರೆಗೆ ಅದೇ ಸಂಸ್ಥೆಯ ವ್ಹಿಕ್ಟೋರಿಯಾ ಹಾಯ್ ಸ್ಕೂಲಿನಲ್ಲಿ( ಈಗಿನ ವಿದ್ಯಾರಣ್ಯ ಹಾಯ್ ಸ್ಕೂಲು) ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.
ಶಂ.ಬಾ. ಜೋಶಿಯವರ ಕೃತಿಗಳನ್ನು ಸಾಂಸ್ಕೃತಿಕ ಸಂಶೋಧನಾ ಸಾಹಿತ್ಯವೆಂದು ಕರೆಯಬಹುದು. ಮಾನವಜನಾಂಗಗಳ ನಾಗರಿಕತೆಯ ಮಜಲುಗಳನ್ನು ಅವರವರ ಭಾಷಾಪ್ರಯೋಗಗಳಲ್ಲಿ ಕಾಣಬಹುದು ಎನ್ನುವದನ್ನು ಶಂ.ಬಾ.ಜೋಶಿಯವರು ತಮ್ಮ ಸಂಶೋಧನ ಲೇಖನಗಳಲ್ಲಿ ತೋರಿಸಿಕೊಟ್ಟರು. ಜೋಶಿಯವರು ಈ ಶಾಸ್ತ್ರವಿಭಾಗವನ್ನು ಪ್ರಾರಂಭಿಸಿದ ಭಾರತೀಯರಲ್ಲಿ ಮೊದಲಿಗರು. ಇದೇ ಸಮಯಕ್ಕೆ ಯುರೋಪಿನಲ್ಲಿ ಸಹ ಈ ತರಹದ ಶಾಸ್ತ್ರವಿಭಾಗ ಪ್ರಾರಂಭವಾಯಿತು. ಆದುದರಿಂದ ಜಗತ್ತಿನಲ್ಲಿ ಇವರನ್ನು ಸಹಪ್ರಥಮರು ಎಂದು ಹೇಳಲು ಅಡ್ಡಿಯಿಲ್ಲ.
ಶ್ರೀ ಶಂಕರ ಬಾಳದೀಕ್ಷಿತ ಜೋಷಿಯವರು ಸೆಪ್ಟೆಂಬರ್ ೨೮, ೧೯೯೧ರಂದು ನಿಧನರಾದರು. ಮಾರನೆಯ ದಿನ, ಸೆಪ್ಟೆಂಬರ್ ೨೯, ೧೯೯೧ರಂದು ೧೫ ದಿನಗಳಿಗೂ ಹೆಚ್ಚು ಕೋಮಾದಲ್ಲಿದ್ದ ಜೋಷಿಯವರ ಪತ್ನಿ ಶ್ರೀಮತಿ ಪಾರ್ವತಿಬಾಯಿ ಕೂಡ ಇಹಲೋಕ ತ್ಯಜಿಸಿದರು.
[ಬದಲಾಯಿಸಿ] ಪುರಸ್ಕಾರಗಳು
ಇವರ "ಕರ್ನಾಟಕ ಸಂಸೃತಿಯ ಪೂರ್ವ ಪೀಠಿಕೆ" ಎಂಬ ಕೃತಿಗೆ ೧೯೭೦ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ೧೯೭೧ರಲ್ಲಿ ಶಂ.ಬಾ.ಜೋಶಿಯವರಿಗೆ ಮೈಸೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು. ೧೯೮೧ರಲ್ಲಿ ಮಡಿಕೇರಿಯಲ್ಲಿ ನಡೆದ ಅಖಿಲ ಕರ್ನಾಟಕ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದರು.
[ಬದಲಾಯಿಸಿ] ಗ್ರಂಥಗಳು :
-
- ಅರವಿಂದ ಘೋಷರ ಚರಿತ್ರವು(೧೯೨೧)
- ಕಂನುಡಿಯ ಹುಟ್ಟು(೧೯೨೨)
- ಕಣ್ಮರೆಯಾದ ಕನ್ನಡ(೧೯೩೩)
- ಮಹಾರಾಷ್ಟ್ರದ ಮೂಲ(೧೯೩೪)
- ಕರ್ನಾಟಕ ಸಂಸ್ಕೃತಿಯ ಪೂರ್ವಪೀಠಿಕೆ-ಭಾಗ ೧(೧೯೩೭)
- ಕನ್ನಡದ ನೆಲೆ(೧೯೩೯)
- ಶಿವರಹಸ್ಯ(೧೯೩೯)
- ರೂಢಿ ಹಾಗು ಭಾವಿಕಲ್ಪನೆಗಳು(೧೯೪೦)
- ಅಗ್ನಿವಿದ್ಯೆ(೧೯೪೬)
- ಸೌಂದರ್ಯವಿಚಾರ(೧೯೪೬)
- ಕರ್ಣನ ಮೂರು ಚಿತ್ರಗಳು(೧೯೪೭)
- ಎಡೆಗಳು ಹೇಳುವ ಕಂನಾಡ ಕಥೆ(೧೯೪೭)
- ಯಕ್ಷಪ್ರಶ್ನೆ(೧೯೪೮)
- ಸಮಾಜದರ್ಶನ(೧೯೪೯)
- ಹಾಲುಮತ ದರ್ಶನ(೧೯೬೦)
- ಕರ್ನಾಟಕ ಸಂಸ್ಕೃತಿಯ ಪೂರ್ವಪೀಠಿಕೆ-ಭಾಗ ೨(೧೯೬೬)
- ಮಕ್ಕಳ ಒಡಪುಗಳು(೧೯೬೬)
- ದಾರಿಯ ಬುತ್ತಿ(೧೯೬೯)
- ಋಗ್ವೇದಸಾರ-ನಾಗಪ್ರತಿಮಾವಿಚಾರ(೧೯೭೧)
- ಕನ್ನಡ ನುಡಿಯ ಜೀವಾಳ(೧೯೭೩)
- ಸಾತತ್ಯ ಮತ್ತು ಸತ್ಯ(೧೯೭೫)
- ಭಾಷೆ ಮತ್ತು ಸಂಸ್ಕೃತಿ(೧೯೭೫)
- ಕನ್ನಡ ಸಾಹಿತ್ಯ ಅಭಿವೃದ್ಧಿ(೧೯೭೬)
- ಪ್ರವಾಹಪತಿತರ ಕರ್ಮ ಹಿಂದೂ ಧರ್ಮ(೧೯೭೬)
- ಶ್ರೀಮತ್ ಭಗವದ್ಗೀತೆಯಲ್ಲಿ ಹುದುಗಿರುವ ರಾಜಯೋಗದ ಸ್ವರೂಪ(೧೯೭೭)
- ಮಾನವಧರ್ಮದ ಆಕೃತಿ(೧೯೭೯)
- ಬುಧನ ಜಾತಕ(೧೯೮೨)
- ಬಿತ್ತಿದ್ದನ್ನು ಬೆಳೆದುಕೊ(೧೯೮೪)
[ಬದಲಾಯಿಸಿ] ಅನುವಾದ ಗ್ರಂಥಗಳು:
-
- ಉಪನಿಷತ ರಹಸ್ಯ(ಮೂಲ: ರಾನಡೆ; ಬೇಂದ್ರೆ ಹಾಗು ದಿವಾಕರರವರ ಜೊತೆಗೆ ಸಹ ಅನುವಾದ; ೧೯೨೮)
- ಶ್ರೀಮತ್ ಭಗವದ್ಗೀತಾ ಭಾಗ-೧ (ಮೂಲ :ಸಾತವಳೇಕರ;೧೯೪೪)