ಕಮಲಾದೇವಿ ಚಟ್ಟೋಪಾಧ್ಯಾಯ
From Wikipedia
ಕಮಲಾದೇವಿ ೧೯೦೩ ಎಪ್ರಿಲ ೩ರಂದು ಮಂಗಳೂರಿನಲ್ಲಿ ಜನಿಸಿದರು.ಇವರ ತಾಯಿ ಗಿರಿಜಾಬಾಯಿ ; ತಂದೆ ಮಂಗಳೂರಿನ ಜಿಲ್ಲಾ ಕಲೆಕ್ಟರ ಆಗಿದ್ದರು. ಕಮಲಾದೇವಿಯವರ ಮದುವೆ ಅವರ ಹದಿನಾಲ್ಕನೆಯ ವಯಸ್ಸಿನಲ್ಲಿ ಆಯಿತು. ಶಾಲಾ ವಿದ್ಯಾರ್ಥಿಯಾಗಿದ್ದಾಗಲೆ , ಎರಡು ವರ್ಷಗಳ ಬಳಿಕ ಅವರು ವಿಧವೆಯಾದರು. ಕಮಲಾದೇವಿ ಧೃತಿಗೆಡಲಿಲ್ಲ. ಉನ್ನತ ವರ್ಗದ ಕುಟುಂಬಗಳ ಹೆಣ್ಣುಮಕ್ಕಳಿಗೆ ಬಹಿಷ್ಕೃತವಾದ ಅಭಿನಯವನ್ನು ಸ್ವೀಕರಿಸಿದ ಕಮಲಾದೇವಿ ಎರಡು ಮೂಕಿ ಚಿತ್ರಗಳಲ್ಲಿ ಸಹ ಅಭಿನಯಿಸಿದರು. ೧೯೨೦ರಲ್ಲಿ ಕಮಲಾದೇವಿಯವರ ಮದುವೆ ಸರೋಜಿನಿ ನಾಯಡು [1] ಅವರ ಸೋದರರಾದ ಸುಪ್ರಸಿದ್ಧ ಕವಿ ಹಾಗು ನಾಟಕಕಾರರಾದ ಹರೀಂದ್ರನಾಥ ಚಟ್ಟೋಪಾಧ್ಯಾಯ [2] ಇವರೊಡನೆ ಜರುಗಿತು. ಕೆಲದಿನಗಳಲ್ಲಿಯೆ ಹರೀಂದ್ರನಾಥರೊಡನೆ ಲಂಡನ್ನಿಗೆ ತೆರಳಿದ ಕಮಲಾದೇವಿ ಅಲ್ಲಿ ಬೆಡ್ಫೋರ್ಡ್ ಕಾಲೇಜು ಸೇರಿಕೊಂಡು ಸಮಾಜಶಾಸ್ತ್ರದ ಅಧ್ಯಯನ ಮಾಡಿದರು.
[ಬದಲಾಯಿಸಿ] ಸಮಾಜ ಸೇವೆ
೧೯೨೩ರಲ್ಲಿ ಭಾರತಕ್ಕೆ ಮರಳಿದ ದಂಪತಿಗಳು ಮಹಾತ್ಮಾ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. ಕಮಲಾದೇವಿ ಸೇವಾದಳವನ್ನು ಸೇರಿದರು. ಈ ನಡುವೆ ಕಮಲಾದೇವಿಯವರ ವಿವಾಹ ವಿಚ್ಛೇದನವೂ ಆಯಿತು.
೧೯೨೬ರಲ್ಲಿ ಮಾರ್ಗಾರೆಟ್ ಕಜಿನ್ ಇವರ ಸಲಹೆಯ ಮೇರೆಗೆ ಮದ್ರಾಸ ಪ್ರಾಂತೀಯ ಶಾಸನ ಸಭೆಯ ಚುನಾವಣೆಗೆ ಸ್ಪರ್ಧಿಸಿದ ಕಮಲಾದೇವಿ ಕೇವಲ ೨೦೦ ಮತಗಳ ಅಂತರದಲ್ಲಿ ಸೋತರು. ೧೯೩೦ರಲ್ಲಿ ಉಪ್ಪಿನ ಸತ್ಯಾಗ್ರಹ ನಡೆದಾಗ, ಪ್ರತಿಬಂಧಿತ ಉಪ್ಪನ್ನು ಮುಂಬಯಿ ಸ್ಟಾಕ್ ಎಕ್ಸ್ಚೇಂಜಿನಲ್ಲಿ ಮಾರಾಟ ಮಾಡಲು ಹೋಗಿ, ಜೇಲಿಗೆ ತೆರಳಿದರು. ೧೯೩೬ರಲ್ಲಿ ಕಮಲಾದೇವಿ ಕಾಂಗ್ರೆಸ್ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿ, ಜಯಪ್ರಕಾಶ ನಾರಾಯಣ [3], ರಾಮ ಮನೋಹರ ಲೋಹಿಯಾ [4] ಹಾಗು ಮೀನೂ ಮಸಾನಿಯವರ ಜೊತೆಗೆ ದುಡಿದರು.
ಎರಡನೆಯ ಜಾಗತಿಕ ಯುದ್ಧ ಪ್ರಾರಂಭವಾದಾಗ, ಕಮಲಾದೇವಿ ಜಗತ್ತನ್ನೆಲ್ಲ ಸುತ್ತು ಹಾಕುತ್ತ, ಭಾರತದ ಸ್ವಾತಂತ್ರ್ಯಕ್ಕಾಗಿ ಜಾಗತಿಕ ಸದಭಿಪ್ರಾಯ ಮೂಡಿಸಲು ಪ್ರಯತ್ನಪಟ್ಟರು.
ಸ್ವಾತಂತ್ರ್ಯದ ಜೊತೆಯಲ್ಲಿಯೇ ದೇಶವಿಭಜನೆಯಾಗಿ ಲಕ್ಷಾಂತರ ನಿರಾಶ್ರಿತರು ಭಾರತದಲ್ಲಿ ಬರತೊಡಗಿದಾಗ, ಕಮಲಾದೇವಿ ಭಾರತೀಯ ಸಹಕಾರಿ ಒಕ್ಕೂಟವನ್ನು ಸ್ಥಾಪಿಸಿ ನಿರಾಶ್ರಿತರ ಪುನರ್ವಸತಿಗೆ ಪ್ರಯತ್ನಿಸಿದರು. ಇದರ ಅಂಗವಾಗಿ ದಿಲ್ಲಿಯ ಹೊರವಲಯದಲ್ಲಿ ಕಮಲಾದೇವಿ ಹಾಗು ಸುಶೀಲಾ ನಯ್ಯರ ಜೊತೆಯಾಗಿ ದುಡಿದು ಫರೀದಾಬಾದ ಎನ್ನುವ ಗ್ರಾಮವನ್ನು ಸ್ಥಾಪಿಸಿದರು. ವಾಯವ್ಯ ಗಡಿಭಾಗದಿಂದ ಬಂದ ೩೦,೦೦೦ ಪಠಾಣರು ಇಲ್ಲಿ ವಸತಿಯಾದರು.
[ಬದಲಾಯಿಸಿ] ಕಲೆ ಹಾಗು ಕರಕೌಶಲ್ಯ
ಸ್ವಾತಂತ್ರ್ಯದ ನಂತರ ಪ್ರಧಾನ ಮಂತ್ರಿ ಜವಾಹರಲಾಲ ನೆಹರೂರವರ ಯಾಂತ್ರೀಕರಣದ ಒಲವಿನಿಂದಾಗಿ ಕರಕುಶಲ ಕೈಗಾರಿಕೆಗಳಿಗೆ , ವಿಶೇಶತಃ ಅಸಂಘಟಿತ ಹೆಣ್ಣು ಮಕ್ಕಳ ಕೈಗಾರಿಕೆಗಳಿಗೆ ಧಕ್ಕೆ ಬರುವ ಸಂಭಾವ್ಯತೆಯನ್ನು ಕಂಡ ಕಮಲಾದೇವಿಯವರು ಅನೇಕ ಕರಕುಶಲ ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಿದರು. ಇದರಲ್ಲಿ ದಿಲ್ಲಿಯಲ್ಲಿರುವ Theatre Crafts Museum ಪ್ರಮುಖವಾದದ್ದು. ಇದಲ್ಲದೆ National School of Drama [5] ವನ್ನು ಸಹ ಇವರು ಸ್ಥಾಪಿಸಿದರು. ಸಂಗೀತ ನಾಟಕ ಅಕಾಡೆಮಿ [6]ಯ ಅಧ್ಯಕ್ಷೆ ಸಹ ಆದರು. ಇದರಂತೆಯೆ All-India Handicrafts Board ಸಹ ಇವರ ಸ್ಥಾಪನೆ. ಇದರ ಮೂಲಕ ಅನೇಕ ಕರಕುಶಲ ಕರ್ಮಿಗಳಿಗೆ ಸನ್ಮಾನ ನೀಡಲಾಗುತ್ತಿದೆ.
[ಬದಲಾಯಿಸಿ] ಗೌರವ
೧೯೫೫ರಲ್ಲಿ ಭಾರತ ಸರಕಾರವು ಕಮಲಾದೇವಿಯವರಿಗೆ ಪದ್ಮಭೂಷಣ [7] ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಆನಂತರ ಪದ್ಮವಿಭೂಷಣ [8] ಪ್ರಶಸ್ತಿ ಸಹ ಇವರಿಗೆ ಲಭಿಸಿತು. ೧೯೬೬ರಲ್ಲಿ ಕಮಲಾದೇವಿಯವರಿಗೆ ರಾಮೊನ್ ಮೆಗ್ಸಾಸೆ [9] ಪ್ರಶಸ್ತಿ ಲಭಿಸಿತು.